Telegram Join My Telegram WhatsApp Join My WhatsApp

ಸಮುದ್ರದಲ್ಲೇ ಯೂ-ಟರ್ನ್ ತೆಗೆದುಕೊಂಡ ಟ್ಯಾಂಕರ್‌, ಚೀನಾದ ಬದಲು ಭಾರತದೆಡೆಗೆ ಪ್ರಯಾಣ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆ, ಚೀನಾಕ್ಕೆ ಕಚ್ಚಾ ತೈಲ ಸಾಗಿಸುತ್ತಿದ್ದ ರಷ್ಯಾದ ಟ್ಯಾಂಕರ್‌ ತನ್ನ ಮಾರ್ಗವನ್ನು ಮಧ್ಯದಲ್ಲೇ ಬದಲಿಸಿ ಈಗ ಭಾರತದತ್ತ ಮುಖಮಾಡಿದೆ. ಮಾ.21ರಂದು ಈ ಹಡಗು ನವಮಂಗಳೂರು ಬಂದರನ್ನು ತಲುಪುವ ಸಾಧ್ಯತೆ ಇದೆ. ಈ ಬೆಳವಣಿಗೆಯು ಭಾರತ–ರಷ್ಯಾ ನಡುವಿನ ಬಲವಾದ ಸಂಬಂಧವನ್ನು ಮತ್ತೊಮ್ಮೆ ತೋರಿಸಿದೆ.

ಮುಖ್ಯಾಂಶಗಳು:

  • ಚೀನಾಕ್ಕೆ ಹೋಗುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ಮಾರ್ಗ ಬದಲಿಸಿ ಭಾರತದತ್ತ ಪ್ರಯಾಣ
  • ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆ ಭಾರತಕ್ಕೆ ಆದ್ಯತೆ ನೀಡಿದ ರಷ್ಯಾ
  • ಹಡಗು ಮಾ.21ರಂದು ನವಮಂಗಳೂರು ಬಂದರು ತಲುಪುವ ನಿರೀಕ್ಷೆ

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧಮೂಲಕ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಹರ್ಮುಜ್ ಜಲಸಂಧಿಯಲ್ಲಿ ಅನಿಶ್ಚಿತತೆ ಉಂಟಾಗಿ ಭಾರತದಲ್ಲಿ ತೈಲ ಸರಬರಾಜಿನಲ್ಲಿ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಇರಾನ್ ಜೊತೆ ನಡೆದ ಮಾತುಕತೆಗಳ ಬಳಿಕ ಆ ಪ್ರದೇಶದಲ್ಲಿ ಸಿಲುಕಿದ್ದ ಕೆಲವು ಇಂಧನ ಹಡಗುಗಳು ಈಗ ಭಾರತದತ್ತ ಸಾಗಲು ಪ್ರಾರಂಭಿಸಿವೆ. ಇದೇ ವೇಳೆ, ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಮಾರ್ಗವನ್ನು ಬದಲಿಸಿ ಭಾರತದತ್ತ ಮುಖಮಾಡಿದೆ.

ಚೀನಾದಿಂದ ಭಾರತದತ್ತ ತಿರುಗಿದ ತೈಲ ಟ್ಯಾಂಕರ್ ಹಡಗು

ಭಾರತ ಮತ್ತು ರಷ್ಯಾ ನಡುವಿನ ಸ್ನೇಹಸಂಬಂಧಗಳು ಗಟ್ಟಿಯಾಗಿದ್ದು, ಈ ಸ್ನೇಹಕ್ಕೆ ಮತ್ತೊಂದು ಉದಾಹರಣೆಯಾಗಿ ಯುರಲ್ಸ್ ಕಚ್ಚಾ ತೈಲ ಹೊತ್ತ ‘ಅಕ್ವಾ ಟೈಟಾನ್’ ಎಂಬ ಅಫ್ರಾಮ್ಯಾಕ್ಸ್ ಟ್ಯಾಂಕರ್ ಈಗ ನವಮಂಗಳೂರು ಬಂದರಿನತ್ತ ಸಾಗುತ್ತಿದೆ. ಹಡಗು ಟ್ರ್ಯಾಕಿಂಗ್ ಮಾಹಿತಿ ಪ್ರಕಾರ, ಮೊದಲು ಚೀನಾದ ರಿಝಾವೋವನ್ನು ಗಮ್ಯಸ್ಥಾನವನ್ನಾಗಿ ಸೂಚಿಸಿದ್ದ ಈ ಹಡಗು, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆ ತನ್ನ ಮಾರ್ಗವನ್ನು ಬದಲಿಸಿ ಭಾರತದೆಡೆಗೆ ಸಾಗುತ್ತಲಿದೆ.

ನವಮಂಗಳೂರು ತಲುಪುವ ನಿರೀಕ್ಷೆ

ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದಿಂದ ಹೊರಟ ಈ ಹಡಗು, ಫೆಬ್ರವರಿ ಕೊನೆಯಲ್ಲಿ ಉಂಟಾದ ಜಾಗತಿಕ ಇಂಧನ ಅನಿಶ್ಚಿತತೆಯ ಬಳಿಕ ತನ್ನ ದಿಕ್ಕನ್ನು ಬದಲಿಸಿಕೊಂಡಿತು. ಈ  ಹಡಗು ಇದೇ ತಿಂಗಳ ಮಾ.21ರಂದು ಕರ್ನಾಟಕದ ನವಮಂಗಳೂರು ಬಂದರನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಭಾರತದ ತುರ್ತು ಕ್ರಮಗಳು:

ಮಧ್ಯಪ್ರಾಚ್ಯದ ಯುದ್ಧದ ಕಾರಣದಿಂದ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವನ್ನು ನಿಭಾಯಿಸಲು ಭಾರತೀಯ ರಿಫೈನರಿಗಳು ತಕ್ಷಣ ಕ್ರಮ ಕೈಗೊಂಡಿದ್ದು, ಸುಮಾರು 30 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿವೆ. ಇತ್ತೀಚಿನ ವಾರಗಳಲ್ಲಿ ಕನಿಷ್ಠ 7 ಟ್ಯಾಂಕರ್‌ಗಳು ಚೀನಾದಿಂದ ಭಾರತದೆಡೆಗೆ ತಮ್ಮ ಗಮ್ಯಸ್ಥಾನವನ್ನು ಬದಲಾಯಿಸಿದವು ಎಂದು ವರದಿಗಳು ತಿಳಿಸಿವೆ.

ಕಜಾಕಿಸ್ತಾನದಿಂದಲೂ ತೈಲ ಸಾಗಣೆ:

ಇದಕ್ಕೆ ಜೊತೆಯಾಗಿ, ಕಜಾಕಿಸ್ತಾನದ ಸಿಪಿಸಿ ಬ್ಲೆಂಡ್ ಕಚ್ಚಾ ತೈಲವನ್ನು ಹೊತ್ತ ‘ಝೌಜೌ ಎನ್.’ ಎಂಬ ಸೂಯೆಜ್‌ಮ್ಯಾಕ್ಸ್ ಟ್ಯಾಂಕರ್ ಕೂಡ ತನ್ನ ಮಾರ್ಗವನ್ನು ಬದಲಿಸಿ ಭಾರತದತ್ತ ಬರುತ್ತಿದೆ. ಈ ಹಡಗು ಮಾ.25ರಂದು ಪಶ್ಚಿಮ ಕರಾವಳಿಯ ಸಿಕ್ಕಾ ಬಂದರನ್ನು ತಲುಪುವ ನಿರೀಕ್ಷೆಯಿದೆ.

ಹರ್ಮುಜ್ ಕಣಿವೆಯಿಂದ ಭಾರತಕ್ಕೆ ಬಂದ ಹಡಗುಗಳು ವಿವರ

ಯುದ್ಧದ ನಂತರ ಹಾರ್ಮುಜ್ ಕಣಿವೆಯ ಮೂಲಕ ಭಾರತಕ್ಕೆ ಬಂದ ಕೆಲವು ಪ್ರಮುಖ ಹಡಗುಗಳು ಗಮನಾರ್ಹವಾಗಿವೆ. ಶಿವಾಲಿಕ್ ಎಂಬ ಭಾರತೀಯ ಧ್ವಜ ಹೊಂದಿದ LPG ಟ್ಯಾಂಕರ್ ಮಾರ್ಚ್ 16, 2026ರ ಸುಮಾರಿಗೆ ಗುಜರಾತ್‌ನ ಮುಂದ್ರಾ ಬಂದರಿಗೆ ಸುರಕ್ಷಿತವಾಗಿ ತಲುಪಿದ್ದು, ದೊಡ್ಡ ಪ್ರಮಾಣದ LPG ಅನ್ನು ಸಾಗಿಸಿತು. ಅದೇ ರೀತಿಯಾಗಿ ನಂದಾ ದೇವಿ ಎಂಬ ಇನ್ನೊಂದು LPG ಹಡಗು ಮಾರ್ಚ್ 17ರಂದು ಕಾಂಡ್ಲಾ ಬಂದರಿಗೆ ಯಶಸ್ವಿಯಾಗಿ ತಲುಪಿತು. ಈ ಎರಡು ಹಡಗುಗಳು ಒಟ್ಟಾರೆ ಸುಮಾರು 92,700 ರಿಂದ 97,000 ಮೆಟ್ರಿಕ್ ಟನ್ LPG ಸಾಗಿಸಿದ್ದು, ದೇಶದ ಅಡುಗೆ ಅನಿಲದ ಕೊರತೆಯನ್ನು ಭಾಗಶಃ ತಗ್ಗಿಸಲು ಸಹಾಯ ಮಾಡಿವೆ.

ಇದರ ಜೊತೆಗೆ, ಭಾರತವು ಸುರಕ್ಷಿತ ಸಾಗಣೆಗಾಗಿ ಸುಮಾರು 22 ಪ್ರಮುಖ ಹಡಗುಗಳನ್ನು ಗುರುತಿಸಿತು, ಇದರಲ್ಲಿ 10ರಷ್ಟು ಭಾರತೀಯ ಧ್ವಜ ಹೊಂದಿದ ಹಡಗುಗಳು (LPG ಮತ್ತು LNG ಸೇರಿ) ಸೇರಿದ್ದವು. ಉದ್ವಿಗ್ನ ಪರಿಸ್ಥಿತಿಯಲ್ಲಿ ಈ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಭಾರತೀಯ ನೌಕಾಪಡೆಯಿಂದ ಭದ್ರತಾ ಎಸ್ಕೋರ್ಟ್ ಒದಗಿಸಲಾಯಿತು. ಜಗ್ ಪ್ರಕಾಶ್ ಎಂಬ ಇಂಧನ ಟ್ಯಾಂಕರ್ ಒಮಾನ್‌ನಿಂದ ಭಾರತಕ್ಕೆ ಪೆಟ್ರೋಲ್ ಸಾಗಣೆ ಮಾಡಿದ್ದು ಕೂಡ ಗಮನಾರ್ಹವಾಗಿದೆ.

ಮಧ್ಯಪ್ರಾಚ್ಯ ಯುದ್ಧದಿಂದ ರಷ್ಯಾಗೆ ಅನಿರೀಕ್ಷೀತ ಲಾಭ :

ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗತಿಯಲ್ಲಿ ಮುಂದುವರಿದಿದೆ. ಮಧ್ಯಪ್ರಾಚ್ಯ ಮತ್ತು ಕೊಲ್ಲಿ ಪ್ರದೇಶಗಳಲ್ಲಿ ಉದ್ವಿಗ್ನತೆ ಇನ್ನೂ ತೀವ್ರವಾಗಿಯೇ ಇದೆ. ಇರಾನ್‌ನ ಪ್ರತಿದಾಳಿ ಕ್ರಮಗಳು ಮತ್ತು ಹರ್ಮುಜ್ ಜಲಸಂಧಿಯ ಮಾರ್ಗದ ಅಡಚಣೆಗಳು ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಲುಗಾಡಿಸಿವೆ. ಯುದ್ಧ ನಿಲ್ಲಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತುಕತೆ ಸೂಚನೆ ನೀಡಿದ್ದರೂ, ಇಸ್ರೇಲ್ ಇನ್ನೂ ಹಿಂದೆ ಸರಿಯಲು ಸಿದ್ಧವಾಗಿಲ್ಲ. ಇದೇ ವೇಳೆ, ಇರಾನ್ “ಅಗತ್ಯವಿದ್ದರೆ ಯುದ್ಧ ಮುಂದುವರಿಸುತ್ತೇವೆ” ಎಂಬ ದೃಢ ನಿಲುವನ್ನು ವ್ಯಕ್ತಪಡಿಸಿದೆ.

ಈ ಯುದ್ಧವು ಅಮೆರಿಕಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ತರಿಸಿದ್ದು, ಇನ್ನೊಂದೆಡೆ ಇಸ್ರೇಲ್‌ಗೆ ನಾಗರಿಕ ಮೂಲಸೌಕರ್ಯಗಳ ಮೇಲೆ ದೊಡ್ಡ ಹಾನಿಯನ್ನುಂಟುಮಾಡಿದೆ. ಆದರೆ ನೇರವಾಗಿ ಯುದ್ಧದಲ್ಲಿ ಭಾಗಿಯಾಗದ ರಷ್ಯಾ, ಈ ಬಿಕ್ಕಟ್ಟಿನಿಂದ ಅನಿರೀಕ್ಷೀತ ಲಾಭವನ್ನು ಪಡೆದುಕೊಳ್ಳುತ್ತಿದೆ.

ಈ ಪರಿಸ್ಥಿತಿಯಲ್ಲಿ ಜಾಗತಿಕ ಶಕ್ತಿಗಳು ತಮ್ಮ ಕಾರ್ಯತಂತ್ರಗಳನ್ನು ಮರುಪರಿಶೀಲಿಸುತ್ತಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಪರಿಸ್ಥಿತಿಯನ್ನು ಕಾರ್ಯತಂತ್ರದ ದೃಷ್ಟಿಯಿಂದ ಗಮನಿಸುತ್ತಿದ್ದಾರೆ. ಇರಾನ್ ಮೇಲಿನ ದಾಳಿಯನ್ನು ರಷ್ಯಾ ಖಂಡಿಸಿದರೂ, ನೇರ ಹಸ್ತಕ್ಷೇಪದಿಂದ ದೂರ ಉಳಿದುಕೊಂಡಿದೆ.

ಯುದ್ಧದ ಭೀತಿಯು ಜಾಗತಿಕ ತೈಲ ಬೆಲೆಗಳನ್ನು ಏರಿಕೆ ಮಾಡಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 84 ಡಾಲರ್ ಮಟ್ಟಕ್ಕೆ ಏರಿಕೆಯಾಗಿದೆ. ರಷ್ಯಾದ ಯುರಲ್ಸ್ ತೈಲ ಬೆಲೆ ಕೂಡ ಅದರ ಬಜೆಟ್ ಅಂದಾಜಿಗಿಂತ ಹೆಚ್ಚಿನ ಮಟ್ಟಕ್ಕೆ ಏರಿಕೆಯಾಗಿದೆ. ಹರ್ಮುಜ್ ಜಲಸಂಧಿಯ ಸಮಸ್ಯೆಗಳ ಹಿನ್ನೆಲೆ ಏಷ್ಯಾದ ಖರೀದಿದಾರರು ಪರ್ಯಾಯ ಪೂರೈಕೆದಾರರನ್ನು ಹುಡುಕುತ್ತಿದ್ದು, ರಷ್ಯಾ ದೇಶವು ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದೆ. ಇದರ ಪರಿಣಾಮವಾಗಿ, ನಿರ್ಬಂಧಗಳ ನಡುವೆಯೂ ರಷ್ಯಾಗೆ ತಾತ್ಕಾಲಿಕ ಆರ್ಥಿಕ ಲಾಭ ದೊರೆಯುತ್ತಲಿದೆ.

ಹೈಡ್ರೋಕಾರ್ಬನ್ ಆದಾಯವು ರಷ್ಯಾದ ಒಟ್ಟು ಬಜೆಟ್‌ನ 30-45% ರಷ್ಟು ಪಾಲು ಹೊಂದಿದೆ. 2025ರಲ್ಲಿ ಕಡಿಮೆಯಾಗಿದ್ದ ಈ ಆದಾಯವು ಈಗಿನ ಬೆಲೆ ಏರಿಕೆಯಿಂದ ಮತ್ತೆ ಹೆಚ್ಚಳ ಕಾಣುವ ಸಾಧ್ಯತೆ ಇದೆ. ಇದರಿಂದ ಉಕ್ರೇನ್ ಯುದ್ಧದಿಂದ ಕುಂದಿದ್ದ ರಷ್ಯಾದ ಆರ್ಥಿಕತೆಗೆ ಬಲ ಸಿಗಬಹುದು.

ಯುರೋಪಿಯನ್ ಒಕ್ಕೂಟದ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಈ ಪರಿಸ್ಥಿತಿಯನ್ನು ಗಮನಿಸಿ, “ಈ ಬಿಕ್ಕಟ್ಟಿನ ಏಕೈಕ ಲಾಭಾಳು ರಷ್ಯಾ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂಧನ ಬೆಲೆಗಳ ಏರಿಕೆಯಿಂದ ಮಾಸ್ಕೋಗೆ ಲಾಭವಾಗುತ್ತಿದ್ದರೆ, ಪಾಶ್ಚಾತ್ಯ ರಾಷ್ಟ್ರಗಳ ಸಂಪನ್ಮೂಲಗಳು ವಿವಿಧ ಸಂಘರ್ಷಗಳಲ್ಲಿ ವಿಭಜನೆಯಾಗುತ್ತಿವೆ. ಇದರಿಂದ ಉಕ್ರೇನ್ ರಕ್ಷಣೆಗೆ ಬಳಸಬೇಕಿದ್ದ ಯುದ್ಧಸಾಮಗ್ರಿಗಳ ಕೊರತೆ ಉಂಟಾಗುವ ಸಾಧ್ಯತೆಯೂ ಇದೆ.

ಭೌಗೋಳಿಕ ರಾಜಕೀಯದ ದೃಷ್ಟಿಯಿಂದ, ಈ ಯುದ್ಧವು ರಷ್ಯಾ–ಇರಾನ್ ಸಂಬಂಧವನ್ನು ಇನ್ನಷ್ಟು ಬಲಪಡಿಸಬಹುದು. 2025ರ ಕಾರ್ಯತಂತ್ರದ ಒಪ್ಪಂದದ ನಂತರ, ಎರಡೂ ರಾಷ್ಟ್ರಗಳು ರಕ್ಷಣಾ ಮತ್ತು ಗುಪ್ತಚರ ಸಹಕಾರವನ್ನು ವಿಸ್ತರಿಸಿವೆ. ಉಕ್ರೇನ್ ಯುದ್ಧದಲ್ಲಿ ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಳಸಿದ ರಷ್ಯಾ, ಈ ಸಹಕಾರವನ್ನು ಮುಂದುವರಿಸಲು ಉತ್ಸುಕವಾಗಿದೆ. ದುರ್ಬಲಗೊಂಡ ಇರಾನ್, ಮುಂದಿನ ದಿನಗಳಲ್ಲಿ ರಷ್ಯಾದ ಮೇಲೆ ಇನ್ನಷ್ಟು ಅವಲಂಬಿತವಾಗುವ ಸಾಧ್ಯತೆಯಿದೆ.

ಯುದ್ಧದ ಪರಿಣಾಮವಾಗಿ ಉಂಟಾದ ಅಡಚಣೆಗಳನ್ನು ಎದುರಿಸಲು ಭಾರತವು ರಷ್ಯಾದ ತೈಲದ ಮೇಲೆ ಹೆಚ್ಚಿನ ಅವಲಂಬನೆ ತೋರಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್, ಭಾರತ ಪೆಟ್ರೋಲಿಯಂ, ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ (IOC) ಸೇರಿದಂತೆ ಭಾರತೀಯ ರಿಫೈನರಿಗಳು ಒಟ್ಟಾರೆ 20 ರಿಂದ 30 ಮಿಲಿಯನ್ ಬ್ಯಾರಲ್ ರಷ್ಯಾದ ಕಚ್ಚಾ ತೈಲವನ್ನು ತ್ವರಿತವಾಗಿ ಖರೀದಿಸಿವೆ.

ರಷ್ಯಾ ತನ್ನ ಪಾಲುದಾರ ಇರಾನ್ ಅನ್ನು ನೇರವಾಗಿ ರಕ್ಷಿಸಲು ಸಾಧ್ಯವಾಗದಿರುವುದು, ಈ ಮೈತ್ರಿಯ ಮಿತಿಗಳನ್ನು ತೋರಿಸುತ್ತದೆ. ಇನ್ನು, ಸಿರಿಯಾದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಂಡಿರುವ ರಷ್ಯಾ, ಇರಾನ್‌ನಲ್ಲಿ ರಾಜಕೀಯ ಬದಲಾವಣೆ ಸಂಭವಿಸಿದರೆ ಮತ್ತೊಮ್ಮೆ ಹಿನ್ನಡೆಯನ್ನು ಎದುರಿಸಬಹುದು.

ಒಟ್ಟಿನಲ್ಲಿ, ಪ್ರಸ್ತುತ ಪರಿಸ್ಥಿತಿಯಲ್ಲಿ ರಷ್ಯಾ ತಾತ್ಕಾಲಿಕ ಲಾಭ ಪಡೆಯುತ್ತಿರುವುದು ಸ್ಪಷ್ಟ. ಆದರೆ ಈ ಲಾಭವನ್ನು ದೀರ್ಘಕಾಲದ ಭೌಗೋಳಿಕ ರಾಜಕೀಯ ಯಶಸ್ಸಾಗಿ ಪರಿವರ್ತಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಯುದ್ಧಗಳು ದೊಡ್ಡ ಶಕ್ತಿಗಳಿಗೆ ಅವಕಾಶಗಳನ್ನು ನೀಡುತ್ತವೆ, ಆದರೆ ಅವು ಯಾವಾಗಲೂ ಶಾಶ್ವತ ಲಾಭಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದು ಖಚಿತವಲ್ಲ.

Leave a Comment